ಜನಜಾಗೃತಿ ಸುದ್ಧಿವಾಹಿನಿ
ಕರ್ನಾಟಕ ಕಾಂಗ್ರೆಸ್ಸಿಗೆ ಚುನಾವಣಾಪೂರ್ವ ಮೈತ್ರಿ ಮತ್ತು ಚುನಾವಣೋತ್ತರ ಮೈತ್ರಿಯ ನಡುವಿನ ನಿಜವಾದ 'ವ್ಯತ್ಯಾಸ' ಏನು ಎನ್ನುವುದು ಅರ್ಥವಾಗುವ ಕಾಲ ಸನ್ನಿಹಿತವಾದಂತಿದೆ. ರಾಜ್ಯ ಅಸೆಂಬ್ಲಿ ಚುನಾವಣೆಗೆ ಮುನ್ನ ಬೀದಿರಂಪ ಮಾಡಿಕೊಂಡಿದ್ದ ಜೆಡಿಎಸ್-ಕಾಂಗ್ರೆಸ್, ಅತಂತ್ರ ಫಲಿತಾಂಶ ಬರುತ್ತಿದ್ದಂತೆಯೇ ಒಂದಾಯಿತು.
ಮನೆ ಬಾಗಿಲಿಗೆ ಬಂದ ಮುಖ್ಯಮಂತ್ರಿ ಹುದ್ದೆಯನ್ನು ಒಲ್ಲೆ ಎನ್ನಲು ಕುಮಾರಸ್ವಾಮಿ ಏನು ರಾಜಕೀಯ ಸನ್ಯಾಸ ತೆಗೆದುಕೊಂಡಿರಲಿಲ್ಲ.
ಆದರೆ, ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ತನ್ನ ಬಿಗುವನ್ನು ಹೆಚ್ಚಿಸಿಕೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್ಸಿಗರು ಬಹಿರಂಗವಾಗಿಯೇ ತಮ್ಮ ಅಪಸ್ವರವನ್ನು ಎತ್ತಲಾರಂಭಿಸಿದರು.
ನಾಲ್ಕು, ಐದು, ಆರು ಸೀಟಿನಿಂದ, ಈಗ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಸೀಟನ್ನು ಬಿಟ್ಟುಕೊಡಬೇಕು ಎನ್ನುವ ನಿಲುವು ತಾಳಿದೆ ಎನ್ನುವ ಸುದ್ದಿ, ಒಂದೆಡೆ ಹೈಕಮಾಂಡಿಗೂ ಮತ್ತು ರಾಜ್ಯ ಕಾಂಗ್ರೆಸ್ಸಿಗರಿಗೂ ನಿದ್ದೆಗೆಡಿಸಿದೆ.
ಇದರ ಜೊತೆಗೆ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವ ತಮ್ಮ ಮುಖಂಡ ರಾಹುಲ್ ಗಾಂಧಿಯವರ ಮಾತು, ಬರೀ ಮಾತಾಗಬಾರದು, ಅದು ಕಾರ್ಯರೂಪಕ್ಕೆ ಬರಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ಸಿಗರು ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆ
ಬಿಜೆಪಿಗಿಂತ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ
ಮುಂಬರುವ ಲೋಕಸಭಾ ಚುನಾವಣೆಗೆ ಮಹಿಳೆಯರಿಗೂ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎನ್ನುವ ಡಿಮಾಂಡ್ ಕೇಳಿಬಂದಿದೆ.
ಕೆಲವೊಂದು ಕ್ಷೇತ್ರಗಳಲ್ಲಂತೂ ಬಲವಾದ ಒತ್ತಡವಿರುವುದರಿಂದ, ಕಾಂಗ್ರೆಸ್ ಯಾವ ರೀತಿ ಈ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿಗಿಂತ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ ಎನ್ನುವ ಸಂದೇಶ ರವಾನೆಯಾಗಬೇಕು ಎನ್ನುವುದು ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿಯರ ವಾದ.
2014ರ ಲೋಕಸಭಾ ಚುನಾವಣೆ
ಲಕ್ಷ್ಮೀ ಹೆಬ್ಬಾಳ್ಕರ್, ಮಂಡ್ಯದಲ್ಲಿ ರಮ್ಯಾ,
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು ಮಹಿಳೆಯರಿಗೆ ಟಿಕೆಟ್ ಅನ್ನು ನೀಡಿತ್ತು. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುರೇಶ್ ಅಂಗಡಿಯವರ ವಿರುದ್ದ 75,860 ಮತಗಳ ಅಂತರದಿಂದ ಮತ್ತು ಮಂಡ್ಯದಲ್ಲಿ ರಮ್ಯಾ, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ವಿರುದ್ದ 5,518 ಮತಗಳ ಅಂತರದಿಂದ ಸೋತಿದ್ದರು.
ಬೆಳಗಾವಿ ಗ್ರಾಮಾಂತರ
ಈ ಬಾರಿ ಮೂರು ಸೀಟು ನೀಡಬೇಕು ಎನ್ನುವ ಒತ್ತಡ
ಆದರೆ, ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಅಸೆಂಬ್ಲಿ ಕ್ಷೇತ್ರದ ಶಾಸಕಿಯಾಗಿರುವುದರಿಂದ ಲೋಕಸಭಾ ಚುನಾವಣಾ ಸ್ಪರ್ಧೆಗೆ ಒಲ್ಲೆ ಎಂದಿದ್ದಾರೆ. ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದರು, ಈ ಬಾರಿ ಮೂರು ಸೀಟು ನೀಡಬೇಕು ಎನ್ನುವ ಒತ್ತಡ ಸದ್ದಿಲ್ಲದೇ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹನ್ನೆರಡು ಕ್ಷೇತ್ರ
ಕಾಂಗ್ರೆಸ್ಸಿಗೆ ತೀವ್ರ ತಲೆನೋವಾಗುವ ಸಾಧ್ಯತೆಯಿಲ್ಲದಿಲ್ಲ
ಹನ್ನೆರಡು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಯಾವ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ಈಗಾಗಲೇ, ಹಲವು ಕಾಂಗ್ರೆಸ್ ಮುಖಂಡರು ನೇರವಾಗಿ ರಾಹುಲ್ ಗಾಂಧಿಯವರಲ್ಲಿ ಮನವಿ ಮಾಡಿಬಂದಿದ್ದಾರೆ. ಇದರ ಜೊತೆಗೆ , ಮೂರು ಸೀಟು ಅನ್ನು ಮಹಿಳೆಯರಿಗೆ ಬಿಟ್ಟುಕೊಡಿ ಎನ್ನುವ ಕೂಗು, ಚುನಾವಣೆಯ ವೇಳೆ ಹೆಚ್ಚಾದರೆ, ಕಾಂಗ್ರೆಸ್ಸಿಗೆ ಅದು ತೀವ್ರ ತಲೆನೋವಾಗುವ ಸಾಧ್ಯತೆಯಿಲ್ಲದಿಲ್ಲ.
ಮೂಲಗಳ ಪ್ರಕಾರ
ಹಲವು ಮಹಿಳಾ ಟಿಕೆಟ್ ಆಕಾಂಕ್ಷಿಗಳು ಮೂಲಗಳ ಪ್ರಕಾರ, ಮಾರ್ಗರೆಟ್ ಆಳ್ವ (ಉತ್ತರ ಕನ್ನಡ), ರಮ್ಯಾ (ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ, ಗ್ರಾಮಾಂತರ ಹೊರತು ಪಡಿಸಿ) ಬಯಸಿದರೆ, ಟಿಕೆಟ್ ನೀಡಲು ಹೈಕಮಾಂಡ್ ಸಿದ್ದವಿದೆ. ಇದರ ಜೊತೆಗೆ, ಎಐಸಿಸಿ ಸದಸ್ಯೆ ಕಾಂತ ನಾಯಕ್ (ವಿಜಯಪುರ), ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ (ಬಾಗಲಕೋಟೆ) ಕೂಡಾ ಟಿಕೆಟ್ ಆಕಾಂಕ್ಷಿಗಳು ಎನ್ನುವ ಸುದ್ದಿ ಹರಿದಾಡುತ್ತಿದೆ.
ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಲು ಮರಿಯದಿರಿ Youtube.com/c/janajagrutiTVNews